ಪ್ರಾದೇಶಿಕ ಪತ್ರಿಕೋದ್ಯಮ, ತುಳು–ಕನ್ನಡ ಸಂಸ್ಕೃತಿ ಸಂರಕ್ಷಣೆ, ಜನಪದ ಪ್ರಚಾರ ಮತ್ತು ಸ್ಥಳೀಯ ಪ್ರತಿಭೆಗಳ ದಾಖಲಾತಿ–ವಿಸ್ತರಣೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಮಂದಾರ ರಾಜೇಶ್ ಭಟ್ಟರು ರಾಷ್ಟ್ರ ಮಟ್ಟದ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದಾರೆ. ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಮತ್ತು ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ ಇವರು ಘೋಷಿಸಿರುವ “ನ್ಯಾಷನಲ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್ ರೀಜನಲ್ ಮೀಡಿಯಾ” ಪ್ರಶಸ್ತಿಗೆ ಭಟ್ಟರನ್ನು ಆಯ್ಕೆ ಮಾಡಲಾಗಿದೆ.
ಪ್ರಾದೇಶಿಕ ದಿನಪತ್ರಿಕೆಗಳು, ದ್ವಿಭಾಷಾ ವಾರಪತ್ರಿಕೆಗಳಲ್ಲಿ ನಿರಂತರ ಬರವಣಿಗೆ, ಸ್ಥಳೀಯ ದೃಶ್ಯ ಮಾಧ್ಯಮ ನಿರೂಪಣೆ ಮತ್ತು ವರದಿಗಾರಿಕೆ, ಅನೇಕ ಪುಸ್ತಕಗಳ ಪ್ರಕಟಣೆ ಹಾಗೂ ಉಚಿತ ವಿತರಣೆ ಮೂಲಕ ಭಟ್ಟರು ದಕ್ಷಿಣ ಕನ್ನಡದ ಸಾಂಸ್ಕೃತಿಕ–ಸಾಮಾಜಿಕ ವಲಯದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ.
ಮಂದಾರ ಪ್ರತಿಷ್ಠಾನದ ಅಧ್ಯಕ್ಷರಾಗಿ, ತುಳು ಮತ್ತು ಕನ್ನಡ ಭಾಷೆಯ ಪಾರಂಪರಿಕ ಶೈಲಿಯ “ಮಂದಾರ ರಾಮಾಯಣ” ಮಹಾಕಾವ್ಯದ ಸುಗಿಪು–ದುನೀಪು, ವಾಚನ–ವ್ಯಾಖ್ಯಾನ ಪ್ರಸಾರ ಕಾರ್ಯಕ್ರಮಗಳನ್ನು ಸಂಯೋಜಿಸುವ ಮೂಲಕ ಸ್ಥಳೀಯ ಸಾಹಿತ್ಯ ಪರಂಪರೆಯ ಸಂರಕ್ಷಣೆಯಲ್ಲಿ ಅವರು ಗಮನಾರ್ಹ ಕೊಡುಗೆ ನೀಡಿದ್ದಾರೆ.
ಅದರೊಂದಿಗೆ “ಬೀರದ ಬೊಲ್ಪು” ಎಂದು ಕರೆಯುವ ತುಳು ಭಾಷೆಯಲ್ಲಿನ ಶ್ರೀಕೃಷ್ಣನ ಬಾಲ್ಯ ಲೀಲಾ ಕಾರ್ಯಕ್ರಮಗಳನ್ನು ಆಯೋಜಿಸಿ, ಮಕ್ಕಳಿಗೂ ಹಿರಿಯರಿಗೂ ತುಳು ಸಂಸ್ಕೃತಿ ತಲುಪುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು — ಇದರ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ, ಭಟ್ಟರು ಜನಪದ ಕಲೆಯ ಪ್ರಸಾರ, ಕಲಾವಿದರ ಪ್ರೋತ್ಸಾಹ ಮತ್ತು ಗ್ರಾಮೀಣ ಕಲಾ ಪರಂಪರೆಯ ಉತ್ತೇಜನದಲ್ಲಿ ಸಕ್ರಿಯ ಪಾತ್ರವಹಿಸಿದ್ದಾರೆ.
ತುಳು ಭಾಷೆ ಶಿಕ್ಷಣ–ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ತುಳು ವರ್ಲ್ಡ್ ಸಂಸ್ಥೆಯ ಸಂಚಾಲಕರಾಗಿ, ತುಳು ಭಾಷೆ–ಸಂಸ್ಕೃತಿಯ ಅಭಿಮಾನ, ಅಧ್ಯಯನ ಮತ್ತು ಜಾಗೃತಿಗೆ ಅವರು ನೀಡಿರುವ ಶ್ರಮ ಪ್ರಶಂಸನೀಯವಾಗಿದೆ.
“ತುಳುವ ಮಹಾಸಭೆ” ಯ ಸದಸ್ಯ ಹಾಗೂ ಮಾಧ್ಯಮ ಸಲಹೆಗಾರರಾಗಿ, ಶತಮಾನೋತ್ಸವದತ್ತ ಸಾಗುತ್ತಿರುವ ಈ ಸಂಸ್ಥೆಯ ವಿವಿಧ ಚಟುವಟಿಕೆಗಳಲ್ಲಿ ಅವರು ವಹಿಸಿರುವ ಯೋಜನಾತ್ಮಕ ಮತ್ತು ಮಾಧ್ಯಮಿಕ ಸೇವೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ.
ಇದಕ್ಕೂ ಮೊದಲು, ಭಟ್ಟರ ಮಾಧ್ಯಮ ಸೇವೆ ಹಾಗೂ ಪರಿಸರ ಸಂರಕ್ಷಣೆಯ ಕಾಯಕವನ್ನು ಗುರುತಿಸಿ ಇಂಡಿಯನ್ ಅಂಪಯರ್ ಯುನಿವರ್ಸಿಟಿ ಹಾಗೂ ಯುನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ ಇವರು “ಗೌರವ ಡಾಕ್ಟರೇಟ್” ನೀಡಿ ಸನ್ಮಾನಿಸಿದ್ದರು.
ಪ್ರಾದೇಶಿಕ ಸಂಸ್ಕೃತಿ, ಭಾಷೆ, ಜನಪದ ಮತ್ತು ಮಾಧ್ಯಮಗಳ ಸಮನ್ವಯಿತ ಸೇವೆಯನ್ನು ದೇಶದ ಮಟ್ಟದಲ್ಲಿ ಗುರುತಿಸಿರುವ ಈ ಪ್ರಶಸ್ತಿ ಮಂದಾರರ ಬಹುಮಟ್ಟಿನ ಕೊಡುಗೆಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.
