ಮೂಡುಬಿದಿರೆ: ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸುಮಾರು 17 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ಖಾದರ್ ಎಂಬವರ ಮಗ ಕೆ. ಅಬ್ದುಲ್ ಬಶೀರ್ (50) ಯಾನೆ ಅರ್ಗ ಬಶೀರ್ ಬಂಧಿತ ಆರೋಪಿ. ಆತ ಕಳೆದ ೪ ವರ್ಷಗಳಿಂದ ನ್ಯಾಯಾಯಲಕ್ಕೆ ಹಾಜರಾಗದೆ ತೆಂಕಮಿಜಾರು ಗ್ರಾಮದಲ್ಲಿದ್ದ ತನ್ನ ಮನೆಯನ್ನು ತನ್ನ ಕುಟುಂಬದೊಂದಿಗೆ ಬಿಟ್ಟು ಬಂಟ್ವಾಳದ ಪರ್ಲಿಯಾ ಎಂಬಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ.
ನ್ಯಾಯಾಲಯವು ಈತನ ವಿರುದ್ಧ ವಾರಂಟ್ ಜಾರಿಗೊಳಿಸಿದ್ದು, ಆರೋಪಿಯ ಇರುವಿಕೆಯನ್ನು ಪತ್ತೆಹಚ್ಚಿದ ಪೊಲೀಸರು ಆತನನ್ನು ದಸ್ತಗಿರಿ ಮಾಡಿದ್ದಾರೆ.
ಬಶೀರ್ ವಿರುದ್ಧ ಗೋಹತ್ಯಾ ನಿಷೇಧ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ, ಅಪಹರಣ, ಕಳ್ಳತನ, ದರೋಡೆ, ಕೊಲೆಯತ್ನ ಇತ್ಯಾದಿ ಹಲವು ಸೆಕ್ಷನ್ಗಳಲ್ಲಿ ಮಾಡುಬಿದಿರೆಯಲ್ಲಿ 8, ಬಜ್ಪೆ ಠಾಣೆಯಲ್ಲಿ 5, ಕಳಸ ಠಾಣೆಯಲ್ಲಿ 2, ಮಂಗಳೂರು ಗ್ರಾಮಾಂತರ, ಬೆಳ್ತಂಗಡಿ ಮತ್ತು ಧರ್ಮಸ್ಥಳ ಠಾಣೆಯಲ್ಲಿ ತಲಾ 1 ಪ್ರಕರಣಗಳಿವೆ.
