ಮೂಡುಬಿದಿರೆ: ಪತ್ರಕರ್ತರೊಬ್ಬರ ಮನೆಯಲ್ಲಿ ಹಗಲು ಹೊತ್ತಿನಲ್ಲಿ ಕಳ್ಳತನ ನಡೆದಿದೆ. ಮನೆಯಿಂದ ಸುಮಾರು 14 ಲಕ್ಷ ರೂಪಾಯಿ ನಗದು, ಮಾಂಗಲ್ಯ ಸರ, ಕಿವಿಯೋಲೆ, ಉಂಗುರ, ಸೇರಿ ಒಟ್ಟು 95 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿ ಆಭರಣ ಕಳ್ಳರು ಕದ್ದೊಯ್ದಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಪತ್ರಕರ್ತ ಸಿದ್ಧನಗೌಡ ಹಾಗೂ ಅವರ ಪತ್ನಿ ನಾಗಮ್ಮ ಅವರು ಕೆಲಸಕ್ಕೆ ತೆರಳಿದ ವೇಳೆ ಸುಮಾರು ಬೆಳಗ್ಗೆ 7:30 ರಿಂದ ಸಂಜೆ 5:30ರ ನಡುವೆ ಈ ಘಟನೆ ನಡೆದಿದೆ.
ಪತ್ರಕರ್ತ ಸಿದ್ಧನಗೌಡ ತಮ್ಮ ಪೂರ್ವಿಕರ ಆಸ್ತಿಯನ್ನು ಮಾರಾಟ ಮಾಡಿ ಬಂದಿದ್ದ ಹಣವನ್ನು ಮಕ್ಕಳ ಶಾಲಾ ಶುಲ್ಕ, ಮನೆ ಖರ್ಚು ಹಾಗೂ ಎಫ್.ಡಿ. ಮಾಡಲು ಮನೆಯಲ್ಲಿ ಇಟ್ಟಿದ್ದರು. ಅವರು ಮನೆಗೆ ವಾಪಸ್ ಬಂದಾಗ ಹಿಂಬಾಗಿಲು ಮುರಿದಿತ್ತು ಹಾಗೂ ಮನೆಯಲ್ಲಿದ್ದ ಲಾಕರ್ ಕೂಡ ಓಪನ್ ಆಗಿತ್ತು.
ಕಳ್ಳರು ಹಣ, ಚಿನ್ನ, ಬೆಳ್ಳಿ ಮಾತ್ರವಲ್ಲದೆ ಆಸ್ತಿ ದಾಖಲಾತಿಗಳು ಮತ್ತು ಇತರೆ ಪ್ರಮುಖ ಪ್ರಮಾಣಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯವರು ನ್ಯಾಯಕ್ಕಾಗಿ ಪೊಲೀಸರಿಗೆ ಮನವಿ ಮಾಡಿದ್ದಾರೆ.
